ಶಂಭು ಹೆಗಡೆ ಉತ್ತರ ಕನ್ನಡದ ರಂಗಸ್ಥಳ
ಲೇಖಕರು : ಕನ್ನಡಪ್ರಭ
ಸೋಮವಾರ, ಆಗಸ್ಟ್ 5 , 2013
|
ಶಂಭು ಹೆಗಡೆ ಉತ್ತರ ಕನ್ನಡದ ರಂಗಸ್ಥಳ. ಅವರೊಬ್ಬ ರಂಗ ಚಿಂತನ ಕೇಂದ್ರವಾಗಿದ್ದರು. ಅವರನ್ನು ಕಳೆದುಕೊಂಡಿದ್ದು ರಂಗ ಚಿಂತಕನನ್ನು ಕಳೆದುಕೊಂಡಂತಾಗಿದೆ ಎಂದು ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಅಭಿಪ್ರಾಯಪಟ್ಟರು.
ನಗರದ ಟಿಎಂಎಸ್ ಸಭಾಭವನದಲ್ಲಿ ಶನಿವಾರ ಯಕ್ಷಗಾನ ರಂಗ ಚಿಂತನ ಬಳಗದಿಂದ ಆಯೋಜಿಸಲಾಗಿದ್ದ ಶಂಭು ಹೆಗಡೆ ಜನ್ಮದಿನೋತ್ಸವ ಮತ್ತು 75ನೇ ವರ್ಷಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಂಭು ಹೆಗಡೆಯವರು ಯಕ್ಷಗಾನ ಪ್ರಸಂಗದ ನಂತರ ಮಾಡಿದ ಭಾಷಣಗಳನ್ನು ಸಂಗ್ರಹಿಸಿದ್ದರೆ ಅದು ರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಗ್ರಂಥವಾಗುತ್ತಿತ್ತು. ಅಧ್ಯಯನದ ವಸ್ತುವಾಗುತ್ತಿತ್ತು ಎಂದು ಹೇಳಿದರು.
ಶಂಭು ಹೆಗಡೆಯವರನ್ನು ಪ್ರೇಕ್ಷಕರು ರೂಪಿಸಿದಷ್ಟು ಮತ್ಯಾವ ಕಲಾವಿದನನ್ನೂ ರೂಪಿಸಿಲ್ಲ. ಅವರ ಪ್ರತಿಯೊಂದು ಪ್ರಸಂಗವನ್ನೂ ಪ್ರೇಕ್ಷಕರು ಸಮಗ್ರವಾಗಿ ವಿಮರ್ಶೆ ಮಾಡುತ್ತಿದ್ದ ಕಾರಣ ಶಂಭು ಹೆಗಡೆಯವರು ರೂಪುಗೊಳ್ಳಲು ಕಾರಣವಾಯಿತು. ಶಂಭು ಹೆಗಡೆಯವರ ನಿರ್ಗಮನದಿಂದ ಯಕ್ಷಲೋಕದಲ್ಲಿ ಶೂನ್ಯಸೃಷ್ಟಿಯಾಗಿದೆ. ರಾಮನ ಪಾತ್ರ ಮಾಡಿದರೆ ರಾಮನಾಗಿ ಬದಲಾಗುತ್ತಿದ್ದ ಶಂಭು ಹೆಗಡೆಯವರನ್ನು ನಾವು ಕಳೆದುಕೊಂಡಿಲ್ಲ. ಬದಲಾಗಿ ರಾಮನನ್ನೇ ಕಳೆದುಕೊಂಡಂತಾಗಿದೆ ಎಂದು ಅವರು ಹೇಳಿದರು.
|
ಕೆರೆಮನೆ ಶಂಭು ಹೆಗಡೆ
|
ಮಕ್ಕಳು ರೋಬೋ ಆಗುತ್ತಿದ್ದಾರೆ: ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಹಾಗೂ ಕಲ್ಕೂರು ಪ್ರತಿಷ್ಠಾಪನದ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರು, ನಮ್ಮ ಬದುಕು ನಮಗೆ ಶತಾವಧಾನಿಯಾಗುವಷ್ಟು ಅನುಭವವನ್ನು ನೀಡುತ್ತದೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಹಾಗೂ ಬದುಕಿನ ವ್ಯವಸ್ಥೆಗಳು ನಮ್ಮನ್ನು, ನಮ್ಮೊಳಗಿನ ಸಾತ್ವಿಕ ಶಕ್ತಿಯನ್ನು ದಮನ ಮಾಡುತ್ತಿದೆ. ನಮ್ಮ ನಿತ್ಯದ ಬದುಕಿನ ಅನುಭದ ಎದುರು, ಇಂದಿನ ಕಂಪ್ಯೂಟರ್, ಮೌಸ್ಗಳು ನೀಡುವ ಜ್ಞಾನ ಅಲ್ಪಪ್ರಮಾಣದ್ದಾಗಿದೆ. ಇಂದಿನ ಆಧುನಿಕ ಶಿಕ್ಷಣ ಮಕ್ಕಳನ್ನು ರೋಬೋ ಮಕ್ಕಳನ್ನಾಗಿ ಮಾತ್ರ ಮಾಡುತ್ತಿದೆ. ಆದರೆ ಬದುಕನ್ನು ಕಲಿಸುತ್ತಿಲ್ಲ ಎಂದು ವಿಷಾದಿಸಿದರು.
ಯಕ್ಷಗಾನದ ಮಹಾನ್ ಸಾಧಕರ ಸಾತ್ವಿಕ ಶಕ್ತಿ ನಿಂತ ನೀರಾಗಬಾರದು. ಅದು ಮುಂದಿನ ಪೀಳಿಗೆಗೂ ಹಬ್ಬವಾಗಬೇಕು. ಮುಂದಿನ ಜನಾಂಗಕ್ಕೂ ಒಬ್ಬ ಶಂಭು ಹೆಗಡೆ ಬರಬೇಕು. ತಮ್ಮೊಳಗಿನ ವಿದ್ವತ್ ಶಕ್ತಿಯಿಂದ ಜನಾಕರ್ಷಣೆಯನ್ನು ಪಡೆಯುತ್ತಿದ್ದ ಶಂಭು ಹೆಗಡೆಯವರನ್ನು ನಿತ್ಯ ನೆನಪು ಮಾಡಿಕೊಳ್ಳಬೇಕು ಎಂದು ಕರೆಯಿತ್ತ ಪ್ರದೀಪಕುಮಾರ ಕಲ್ಕೂರು ಇಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ಅನೇಕ ಬಗೆಯ ಸೀಮೋಲ್ಲಂಘನ ಚಿಂತನೆಗಳು ನಡೆಯುತ್ತಿವೆ. ಇಂಗ್ಲಿಷ್ ಭಾಷೆಯಲ್ಲಿನ ಯಕ್ಷಗಾನ ಇದಕ್ಕೊಂದು ದೊಡ್ಡ ಉದಾಹರಣೆ. ಇಂಥ ಕಾರ್ಯಗಳು ಹೆಚ್ಚು ಹೆಚ್ಚು ಆಗಬೇಕಾಗಿದೆ ಎಂದರು.
ಯಕ್ಷ ಸಾಧಕ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆರೆಮನೆ ಕುಟುಂಬ ಯಕ್ಷಗಾನಕ್ಕಾಗಿಯೇ ತಮ್ಮನ್ನು ತಾವು ತೊಡಗಿಸಿಕೊಂಡು ಯಕ್ಷಗಾನವನ್ನು ಉಳಿಸಿದೆ. ಬೆಳೆಸಿದೆ. ಶಂಭು ಹೆಗಡೆಯವರು ಯಕ್ಷಗಾನದಲ್ಲೇ ಹುಟ್ಟಿ, ಬೆಳೆದು, ಯಕ್ಷರಂಗದಲ್ಲಿಯೇ ಕೊನೆಯಾದವರು. ಅವರೊಬ್ಬ ಯಕ್ಷಸಾಧಕ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಭಾಗವತರಾದ ವಿದ್ವಾನ್ ಗಣಪತಿ ಭಟ್ಟ ಹಾಗೂ ಮೃದಂಗ ವಾದಕ ಎ.ಪಿ. ಪಾಠಕ್ ಅವರನ್ನು ಸನ್ಮಾನಿಸಲಾಯಿತು. ಗಣಪತಿ ಭಟ್ಟ ಹಾಗೂ ಪಾಠಕ್ ಅವರು ಸನ್ಮಾನಿತರಾಗಿ ಮಾತನಾಡಿದರು. ಪತ್ರಕರ್ತ ಅಶೋಕ ಹಾಸ್ಯಗಾರ, ಜಿ.ಕೆ. ಭಟ್ಟ ಸೆರಾಜೆ, ಎಸ್.ಎಂ. ಹೆಗಡೆ, ಯೋಗೀಶ ಜಿ. ಸಾಗರ ಸಾಂದರ್ಭಿಕವಾಗಿ ಮಾತನಾಡಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್.ಪಿ. ಗಾಂವಕರ್ ಇದ್ದರು. ಟಿಎಂಎಸ್ ಶಿರಸಿಯ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ನಂತರ ವಿಧೂಷಿ ಸೀಮಾ ಭಾಗವತ್ ಅವರ ಶಿಷ್ಯೆಯರಾದ ದೀಪಾ ಭಾಗವತ, ಮೋನಿಕಾ ಹೆಗಡೆ ಹಾಗೂ ನಿಧಿ ನೇರ್ಲಕಟ್ಟೆ ಅವರ ಭರತನಾಟ್ಯ ಕಾರ್ಯಕ್ರಮ ಮನಸೆಳೆಯಿತು. ನಂತರ ನಡೆದ ವಾಲೀಮೋಕ್ಷ ತಾಳಮದ್ದಲೆ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಕೃಪೆ : http://kannadaprabha.com
|
|
|